ಇಂದಿನ ದೃಶ್ಯಕಲಾ ಪ್ರಪಂಚದಲ್ಲಿ ಅಂತರ್ಜಾಲದ ಪ್ರಾಮುಖ್ಯತೆ ಬಹಳ ಮುಖ್ಯವಾದುದು ಎಂದು ನಂಬುವ ಹೊತ್ತಿನಲ್ಲೇ ಅದರ ಪ್ರಸ್ತುತತೆಯನ್ನು ವಿಶ್ಲೇಷಿಸಬೇಕಾಗಿದೆ. ಅದು ಕಲಾಕೃತಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳಿಸುವುದಾಗಬಹುದು ಅಥವಾ ಕಲಾಕೃತಿಯನ್ನು ಸ್ವಯಂ ಪ್ರದರ್ಶಿಸುವುದಾಗಬಹುದು. ಕಲಾಕೃತಿಯ ರಚನೆಯ ನಂತರದ ಪ್ರತಿ ಹಂತದಲ್ಲು ಅಂತರ್ಜಾಲ ಇಂದು ದೃಶ್ಯಕಲೆಯಲ್ಲಿ ತನ್ನದೇ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಇದರಲ್ಲಿ ಸಾಮಾಜಿಕ ತಾಣಗಳ (ಫೇಸ್ ಬುಕ್, ಆರ್ಕುಟ್, ಗೂಗಲ್ ಪ್ಲಸ್) ಕೊಡುಗೆ ಬಹು ಮುಖ್ಯವಾದುದು.

ಇಂದು ಕಲಾಕೃತಿಯ ಪ್ರದರ್ಶಿಸಲ್ಪಡುವ ಸ್ಥಳ ಬದಲಾಗಿದೆ. ವಾಲ್ಟರ್ ಬೆಂಜಮಿನ್ ತನ್ನ ’ಆರ್ಟ್ ವರ್ಕ್ ಇನ್ ದ ಏಜ್ ಆಫ್ ಮೆಕಾನಿಕಲ್ ರೀಪ್ರೊಡಕ್ಷನ್’ ಲೇಖನದಲ್ಲಿ ಛಾಯಾಗ್ರಹಣದ ಆವಿಷ್ಕಾರದ ನಂತರ ಮೂಲ ಕಲಾಕೃತಿಯನ್ನು ನೋಡುವಾಗ ಆ ಕಲಾಕೃತಿಗಿದ್ದ ಪ್ರಭೆ ಮರೆಯಾಯಿತೆಂದು ಚರ್ಚಿಸುತ್ತಾನೆ. ಅದರದೇ ಮುಂದುವರಿದ ಭಾಗವಾಗಿ ಇಂದು ಚರ್ಚಿಸಿದಲ್ಲಿ ಆ ಪ್ರಭೆ ಮಾಯವಾಗಿ ಕಲಾಕೃತಿ ಜಾಲದೊಳಗೆ ಸೇರಿಕೊಂಡಿದೆ. ಒಂದು ಕಲಾಕೃತಿ ರಚನೆಯನಂತರ ಅದನ್ನುವೀಕ್ಷಿಸುವ ಸಮಯದ ಅಂತರ-ಅಂತರ್ಜಾಲದ ಆಗಮನದ ನಂತರ ದೂರವಾಗಿದೆ. ಇಂದು ಜಗತ್ತಿನ ಯಾವುದೇ ಮೂಲೆಯಲ್ಲಿ ಕೂತ ಕಲಾವಿದ ತಾನು ರಚಿಸಿದ ಕಲಾಕೃತಿಯನ್ನು ಅಂತರ್ಜಾಲದ ಮೂಲಕ ಎಲ್ಲಿಗೆ ಬೇಕಾದರು ತಲುಪಿಸಬಹುದಾಗಿದೆ. ಜಗತ್ತಿನ ಯಾವುದೆ ಮೂಲೆಯಲ್ಲಿ ನಡೆಯುವ ಕಲಾ ಚಟುವಟಿಕೆಯ ವಿವರಗಳು ಕ್ಷಣಗಳಲ್ಲಿ ಜಗತ್ತಿನಾದ್ಯಂತ ತಲುಪುತ್ತದೆ. ಅದು ಸಕಾರಾತ್ಮಕ ಸಂಗತಿಗಳಾಗಬಹುದು ಅಥವಾ ನಕಾರಾತ್ಮಕ ಸಂಗತಿಗಳಾಗಬಹುದು. ಹುಸೇನ್ ಸಾವಿನ ಸುದ್ದಿ ಟಿ,ವಿ. ಮಾಧ್ಯಮಕ್ಕಿಂತ ವೇಗವಾಗಿ ಜನಸಮುದಾಯವನ್ನು ತಲುಪುತ್ತದೆ. ಹುಸೇನ್ ಸಾವಿನ ಬಗ್ಗೆ ಗಂಭೀರವಾಗಿ ಗುರುತಿಸಿಕೊಂಡಿರುವ ಕಲಾವಲಯದೊಳಗೆ ನೆಡೆಯದ ಚರ್ಚೆಗಳು, ಹುಸೇನತ್ವವನ್ನು ವಿರೊಧಿಸುವ ಭಾರತೀಯರಿಂದ ಸಾಮಾಜಿಕ ತಾಣದಲ್ಲಿ ಚರ್ಚೆಗೊಳಪಡುತ್ತದೆ.

ಇಲ್ಲಿಯವರೆಗೂ ಯಾರನ್ನು ಶ್ರೀಸಾಮಾನ್ಯ ಎಂದು ಕಲಾವಲಯ ತಮ್ಮ ಅಂತರವನ್ನು ಕಾಪಾಡಿಕೊಂಡು ಬಂದಿತ್ತೋ ಅದು ಕ್ರಮೇಣ ಮರೆಯಾಗುತ್ತಿದ್ದು, ಕಲಾವಲಯದೊಳಗೆ ಬಂದು ಚರ್ಚಿಸಲಾಗದ ಶ್ರೀಸಾಮಾನ್ಯ ಅಂತರ್ಜಾಲದಲ್ಲಿ ಚರ್ಚಿಸುತ್ತಿದ್ದಾನೆ. ಈ ಚರ್ಚೆಗೆ ನಿಯಂತ್ರಿಸುವವ ಎಂದು ಯಾರು ಇರುವುದಿಲ್ಲ. ಹಾಗಾಗಿ ಇಲ್ಲಿ ಗಟ್ಟಿತನ ಇರುವಷ್ಟೇ ಜೊಳ್ಳು ಕೂಡ ಹೆಚ್ಚೆ ಇರುತ್ತದೆ. ಇದೆಲ್ಲದರ ಮಧ್ಯೆ ಅಂತರ್ಜಾಲದ ಬೆಳವಣಿಗೆಯಿಂದ ಉಪಯೋಗ ಪಡೆಯುವವರ ಸಂಖ್ಯೆಯು ಹೆಚ್ಚಿದೆ ಎಂದು ಹೇಳಬಹುದು. ಉದಾಹರಣೆಗೆ ಬೆಂಗಳೂರು ಎಂಬ ದೃಶ್ಯಕಲೆಯ ಚಟುವಟಿಕೆಯ ಕೇಂದ್ರ ಸ್ಥಾನದಿಂದ ದೂರದಲ್ಲಿರುವ ಗುಲ್ಬರ್ಗಾ, ಧಾರವಾಡ, ಬೆಂಗಳೂರಿನಲ್ಲಿರುವ ಕಲಾವಿದರಿಗೆ, ಕಲಾವಿಧ್ಯಾರ್ಥಿಗಳಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ಗ್ಯಾಲರಿಗಳನ್ನು ಸಂಪರ್ಕಿಸಲು ಬೆಂಗಳೂರಿಗೋ ಅಥವ ದೆಹಲಿ ಬಾಂಬೆಗೇ ಸ್ವತಃ ಹೋಗಲೆಬೇಕೆಂಬ ಅನಿವಾರ್ಯತೆ ಇಲ್ಲ. ತಾವಿದ್ದಲ್ಲಿಂದಲೆ ಅವರು ಯಾವುದೇ ಗ್ಯಾಲರಿಯನ್ನು ಸಂಪರ್ಕಿಸಬಹುದು ತಮ್ಮ ಮೂಲಕೃತಿಯ ಪ್ರತಿಕೃತಿಯ ಡಿಜಿಟಲ್ ರೂಪದಲ್ಲಿ. ಯಾವುದೇ ಪ್ರಶಸ್ತಿಗೆ, ಪ್ರದರ್ಶನಕ್ಕೆ, ಅರ್ಜಿ ಸಲ್ಲಿಸಲು ತಮ್ಮ ಕಲಾಕೃತಿಗಳನ್ನು ಅಂಚೆ ಮೂಲಕವೇ ತಲುಪಿಸಬೆಕು ಅಥವ ತಾವೇ ಖುದ್ದಾಗಿ ತೆಗೆದುಕೊಂಡು ಹೋಗಬೇಕಾಗಿಲ್ಲ. ಅಂತರ್ಜಾಲದ ಮೂಲಕ ಅಲ್ಲೇ ಅರ್ಜಿ ಸಲ್ಲಿಸಬಹುದು, ಇ-ಮೇಲ್ ಮುಖಾಂತರ ತಮ್ಮ ಕಲಾಕೃತಿಗಳ ಚಿತ್ರವನ್ನು ಕಳಿಸಬಹುದು. ಈ ವಿಷಯವನ್ನು ಮತ್ತೊಂದು ಕೋನದಿಂದ ನೋಡಿದಲ್ಲಿ ಇಲ್ಲಿ ಮೂಲ ಕಲಾಕೃತಿ ಎಂಬುದು ಇದ್ದಲ್ಲಿಯೇ ಇರುತ್ತದೆ. ಅದರ ಪ್ರತಿಕೃತಿ ಡಿಜಿಟಲೈಸ್ಡ್ ಆಗಿ ಪರಿವರ್ತನೆಗೊಂಡು ಅಂತರ್ಜಾಲದ ಮೂಲಕ ಒಂದು ಪ್ರದೇಶದಿಂದ ಮತ್ತೊಂದೆಡೆಗೆ ಚಲಿಸುತ್ತದೆ. ಈ ಪ್ರತಿಕೃತಿ ಕಂಪ್ಯೂಟರ್ ಎಂಬ ಪರದೆಯ ಒಳಗೆ ಇರುತ್ತದೆ. ಇಲ್ಲಿ ಈ ಕೃತಿಯನ್ನು ನೊಡುವ ಕ್ರಿಯೆಯು ಇಲ್ಲಿಯವರೆಗು ಕಲಾಕೃತಿಯನ್ನು ’ನೋಡುವ’ ಅಭ್ಯಾಸವೇ ಬದಲಾಗುತ್ತದೆ. ಮೂಲ ಕಲಾಕೃತಿಯನ್ನು ಗ್ಯಾಲರಿಯಲ್ಲಿ ನೋಡುವ ಕ್ರಮವೂ , ತಮ್ಮ ಕಂಪ್ಯೂಟರ್ ಪರದೆಯ ಮೇಲೆ ನೋಡುವು ಕ್ರಮವೂ ಬೇರೆ ಬೇರೆಯಾಗುತ್ತದೆ. ಮೂಲ ಕೃತಿಯನ್ನು ನೋಡುವಾಗ ಅದರೊಳಗಿನ ಯಾವುದಾದರು ನಿರ್ದಿಷ್ಟ ಸೂಕ್ಷ್ಮತೆಯನ್ನು ಗಮನಿಸಬೇಕೆಂದಿದ್ದಲ್ಲಿ ಕಲಾಕೃತಿಯ ಹತ್ತಿರ ಹೋಗಬೇಕಾಗುತ್ತದೆ, ಕಲಾಕೃತಿ ಯಥಾಸ್ಥಿತಿಯಲ್ಲಿರುತ್ತದೆ. ಕಂಪ್ಯೂಟರ್‌ನಲ್ಲಿ ನೋಡುವಾಗ ನೋಡುವ ಅಂತರ ಅಷ್ಟೇ ಇದ್ದು ಚಿತ್ರವನ್ನು ಜೂಮ್ ಮಾಡುವುದರ ಮೂಲಕ ಮೂಲಕೃತಿಗಿಂತ ಸುಮಾರು ಪಟ್ಟು ದೊಡ್ದದು ಮಾಡಿ(ಅದರಲ್ಲು ಪಿಕ್ಸಲ್ ಮೇಲೆ ಅವಲಂಬಿತ) ನೋಡಬಹುದು. ಇದು ಸ್ಥಿರಚಿತ್ರಕ್ಕೆ ಮಾತ್ರ ಅನ್ವಯಿಸುತ್ತದೆ. ವಿಡಿಯೋ ದೃಶ್ಯಗಳನ್ನು ಅಂತರ್ಜಾಲದಲ್ಲಿ ನೋಡುವಾಗ ಅದರ ರೆಸ್ಯುಲೂಷನ್ ಎಂದಿಗೂ ಅದು ಚಿತ್ರೀಕರಣಗೊಂಡ ಸ್ವರೂಪಕ್ಕಿಂತ ಕಡಿಮೆ ಮಟ್ಟದ್ದಾಗಿರುತ್ತದೆ. ವಿಡಿಯೋ ಕಲೆಯನ್ನು ಚಿತ್ರಿಸುವಾಗಲೇ ಅದನ್ನು ನೋಡಬೇಕಾದ ಕೋನವನ್ನು ಕಲಾವಿದ ನಿರ್ಧರಿಸಿರುತ್ತಾನೆ, ಹಾಗಾಗಿ ಅದು ಗ್ಯಾಲರಿಯಲ್ಲಿ ನೋಡಿದರೂ ಅಂತರ್ಜಾಲದಲ್ಲಿ ನೋಡಿದರೂ ಅದನ್ನು ನೋಡುವ ಕೋನವು ಬದಲಾಗುವುದಿಲ್ಲ. ಆದರೆ ಗ್ಯಾಲರಿಯಲ್ಲಿ ಅದು ಪ್ರೊಜೆಕ್ಟರ್‌ನಿಂದ ಗೋಡೆಯ ಮೆಲೆ ಪ್ರೊಜೆಕ್ಟ್ ಆಗಿ ಕಾಣುವ ಪ್ರಕ್ರಿಯೆಯು ಬದಲಾಗಿ ಅಂತರ್ಜಾಲದ ಒಳಗೆ ಅಡಕಗೊಂಡು ಪರದೆಯ ಮೇಲೆ ಮೂಡುತ್ತ ನೋಡುಗನ ದೃಷ್ಟಿಯೆಡೆಗೆ ಚಲಿಸುತ್ತಿರುತ್ತದೆ. ಹಾಗಾಗಿ ಅಂತರ್ಜಾಲವು ಪ್ರತಿಕೃತಿಗಳನ್ನು ತನ್ನೊಳಗೆ ಸೇರಿಸಿಕೊಂಡ ನಂತರ ಮೂಲಕೃತಿಗೂ-ಪ್ರತಿಕೃತಿಗಳನ್ನು ನೋಡುವ ಪ್ರಕ್ರಿಯೆಯನ್ನೇ ಬದಲಿಸಿಬಿಡುತ್ತದೆ. ಇನ್‌ಸ್ಟಾಲೇಷನ್ ಕಲೆಯು ಅಂತರ್ಜಾಲವನ್ನು ಹೊಕ್ಕಬೇಕಾದಲ್ಲಿ ಸ್ಥಿರ ಅಥವಾ ವಿಡಿಯೋ ಎರಡರಲ್ಲಿ ಒಂದನ್ನು ಅವಲಂಬಿಸಲೇಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಮೂಲಕೃತಿಯನ್ನು ಉದ್ದೀಪಿಸುವ ದಾಖಲೆಯಾಗಿ ಉಳಿಯುತ್ತದೆಯಷ್ಟೇ ಹೊರತು ಅದು ಎಂದಿಗೂ ಮೂಲಕೃತಿಯ ಭೌತಿಕ ಅಸ್ತಿತ್ವವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ರೀತಿಯ ಮೂರು ಆಯಾಮದ ಪ್ರತಿಗಳನ್ನು ವೀಕ್ಷಿಸಲೆಂದೇ ಮತ್ತೊಂದು ರೀತಿಯ ತಂತ್ರಜ್ಞಾನವಿದೆ. ಅದಕ್ಕೆ ವರ್ಚ್ಯುವಲ್ ಫೋಟೋಗ್ರಫಿ ಎನ್ನುತ್ತಾರೆ. ಇದು ಯಾವುದೇ ವಸ್ತುವಿನ ೩ಆಯಾಮವನ್ನು ತೋರಿಸಲು ಬಳಸಲಾಗುತ್ತದೆ. ಈ ತಂತ್ರಜ್ಞಾನದ ಮೂಲಕ ಶಿಲ್ಪ ಅಥವ ಇನ್‌ಸ್ಟಾಲ್ಲೇಷನ್ ಕೃತಿಗಳನ್ನು ಭೌತಿಕವಾಗಿ ಅಲುಗಾಡಿಸದೆ, ಯಾವುದೇ ಭಾಗ, ಅಂಶವನ್ನು, ನಮಗೆ ಬೇಕಾದ ಕೋನದಲ್ಲಿ ನೋಡಬಹುದು.

ತಮ್ಮ ಕಲಾಕೃತಿ ಅಥವ ವಿಡಿಯೋಗಳನ್ನು ಕಳಿಸಬೇಕೆಂದರೆ ಉಚಿತವಾಗಿ ಮೇಲ್ ಸೌಲಭ್ಯವನ್ನು ನೀಡುವ ಗೂಗಲ್‌ನ ಜೀಮೈಲ್, ಯಾಹೂ ಮೈಲ್ ‌ನಂತಹ ಹಲವು ಜಾಲಗಳಲ್ಲಿ ಸ್ಥಳಾವಕಾಶವು ಸೀಮಿತವಾಗಿದೆ. ಅಂತಹ ತೊಂದರೆಗಳನ್ನು ನಿವಾರಿಸಲೆಂದೆ ಇನ್ನು ಹಲವು ಜಾಲಗಳು ಹಲವು ನಿಬಂದಗಳೊಂದಿಗೆ ಈ ಸ್ಥಳಾವಕಾಶವನ್ನು ಹಿಗ್ಗಿಸಿದ್ದಾರೆ ಅಂತಹ ಕೆಲವು ತಾಣಗಳೆಂದರೆ https://www.yousendit.com/ , https://.sendspace.com/, https://.dropbox.com/, ಈ ತಾಣಗಳು ನೀಡುವ ಸೌಲಭ್ಯವು ಎಂಬಿ(ಮೆಗಾ ಬೈಟ್ಸ್)ಗಳಿಂದ ಮುಂದುವರೆದು ಜಿಬಿ(ಗಿಗಾ ಬೈಟ್ಸ್)ಗಳವರೆಗೂ ಇವೆ. ಇನ್ನು ಸಾಮಾಜಿಕ ತಾಣಗಳಷ್ಟೇ ಇಂದಿನ ದೃಶ್ಯಕಲಾ ಮಾಧ್ಯಮದಲ್ಲಿ ಪ್ರಮುಖವಾಗಿ ಬಳಸಲ್ಪಡುತ್ತಿರುವ ತಾಣವೆಂದರೆ ಯೂಟ್ಯೂಬ್ ಮತ್ತು ವಿಮಿಯೋ ವಿಡಿಯೋ ತಾಣಗಳು. ಈ ವಿಡಿಯೋ ತಾಣಗಳಲ್ಲಿ ತಮ್ಮ ಹೆಸರಿನ ಖಾತೆಯನ್ನು ತೆರೆಯುವ ವ್ಯಕ್ತಿ ತನ್ನ ವಿಡಿಯೋ ಕಲೆ ಅಥವ ತನ್ನ ಅಭಿನಯ ಕಲೆಯ ವಿಡಿಯೋಗಳನ್ನು ಅಪ್‌ಲೋಡ್ ಮಾಡಿ ಅದನ್ನು ಸಾಮಾಜಿಕ ತಾಣಗಳ ಮೂಲಕ ಜನರಿಗೆ ತಲುಪುವಂತೆ ಮಾಡಬಹುದಾಗಿದೆ. ವಿಡಿಯೋ ಅಷ್ಟೇ ಅಲ್ಲದೆ. ಚರ್ಚೆ, ಸಂವಾದ, ಸೆಮಿನಾರುಗಳನ್ನು ಧ್ವನಿಗ್ರಹಣ ಮಾಡಿ ಬರೀ ಧ್ವನಿ ಮಾತ್ರ ಕೇಳುವಂತ ಸೌಲಭ್ಯವಿರುವ ತಾಣಗಳು ಇವೆ. ಅದರಲ್ಲಿ ಪ್ರಮುಖವಾದುದು http://soundcloud.com/.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಂತರ್ಜಾಲದಲ್ಲಿ ಎಷ್ಟೇ ಉಚಿತ ಅಥವ ಹಣ ಕೊಟ್ಟು ಸ್ಥಳ-ಅವಕಾಶಗಳನ್ನು ಪಡೆದರೂ ಅದರಲ್ಲಿ ಸೇರಿಸುವ ಪ್ರತಿ ದಾಖಲೆ ಚಿತ್ರಗಳ ಪ್ರತಿಯೊಂದನ್ನು ಶೇಖರಿಸಿಡಲೇಬೇಕಾದ ಅನಿವಾರ್ಯತೆ ಅಂತರ್ಜಾಲ ಹುಟ್ಟಿಸುವ ಅತಂತ್ರತೆಯ ಇನ್ನೊಂದು ಮುಖವನ್ನು ಪರಿಚಯಿಸುತ್ತದೆ.

ಅಂತರ್ಜಾಲದಲ್ಲಿ ಇಷ್ಟೆಲ್ಲ ಸೌಲಭ್ಯ ಇದ್ದರೂ ನಮ್ಮ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇದನ್ನು ಬಳಸುವವರ ಸಂಖ್ಯೆ ಬಹಳ ಕಡಿಮೆಯೇ ಎಂದು ಹೇಳಬಹುದು. ಕಾರಣಗಳನ್ನು ಹುಡುಕಿದರೆ ಹಲವು ಸಿಗುತ್ತವೆ. ಮೊದಲಿಗೆ ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡದ ಕೆಲವೇ ಕೆಲವು ಪ್ರಮುಖ ನಗರಗಳನ್ನು ಹೊರತುಪಡಿಸಿದರೆ ಇನ್ನುಳಿದ ನಗರಗಳಲ್ಲಿ ಅಂತರ್ಜಾಲದ ಬಗ್ಗೆ ಮಾಹಿತಿ ಇದ್ದರೂ, ಈ ರೀತಿಯ ಸೌಲಭ್ಯಗಳ ಮೂಲಕ ನಡೆಯುವ ಕಲಾಚಟುವಟಿಕೆಗಳ ಮಾಹಿತಿ ತಲುಪಿಸುವ ಸೌಲಭ್ಯ ಇಲ್ಲದಿರುವುದು ಮತ್ತು ಅಂತರ್ಜಾಲದ ಕುರಿತಂತೆ ಇರುವ ಮೌಡ್ಯ ಕಾರಣವೆನ್ನಬಹುದು.

ಈಗಿರುವ ಚಟುವಟಿಕೆಗಳೆಲ್ಲವೂ ಬೆಂಗಳೂರು ಕೇಂದ್ರಭಾಗದಲ್ಲಿ ಮಾತ್ರ ನಡೆಯುತ್ತಿರುವಂತದ್ದು. ಇದರೊಳಗೆ ಭಾಗವಹಿಸುತ್ತಿರುವವರು ಬಹುತೇಕ ಇಲ್ಲಿಯೇ ನೆಲೆಸಿರುವವರು ಮಾತ್ರ. ಬೇರೆ ಊರಿಗಳಿಂದ ಬಂದಿರುವವರು ಈ ಚಟುವಟಿಕೆಗಳ ಕುರಿತಂತೆ ಮಾಹಿತಿ ಇದ್ದರು ಅದರಲ್ಲಿ ಭಾಗವಹಿಸುವವರ ಸಂಖ್ಯೆ ಮಾತ್ರ ಬೆರಳೆಣಿಕೆಯಲ್ಲಿದೆ. ಇಲ್ಲಿ ಭಾಗವಹಿಸುವಿಕೆ ನಡೆದರೂ ಅದರೊಳಗಿನ ಮಾಹಿತಿ ಮತ್ತು ಕಲೆಯನ್ನು ಕಲಾಲೋಕದಲ್ಲಿರುವವರು ಗಂಭೀರವಾಗಿ ಪರಿಗಣಿಸುವುದೂ ಕಡಿಮೆ. ಅದಕ್ಕೆ ಕಾರಣ ಹಳೆಯ ಕಾಲದಿಂದ ನಂಬಿ ಬಂದಿರುವ ನಂಬಿಕೆಗಳು. ಜನಪ್ರಿಯತೆ ಮತ್ತು ಕಲಾತ್ಮಕತೆ ಎಂಬುದು ಎಂದಿಗೂ ಬೆರೆಯಲು ಸಾಧ್ಯವಿಲ್ಲ ಎಂಬುದು. ಜನಪ್ರಿಯವಾದದ್ದೆಲ್ಲ ಕಲಾತ್ಮಕತೆ ಲೇಪನ ಹೊಂದಿರುವುದಿಲ್ಲ ಎಂಬ ನಂಬಿಕೆಯೆ ಹಲವು ಪ್ರಯೋಗಗಳನ್ನು ಜನಪ್ರಿಯ ವೇದಿಕೆಗಳನ್ನು ಹತ್ತಲು ಬಿಡುತ್ತಿಲ್ಲ. ಇದಕ್ಕೆ ಉದಾಹರಣೆ ನೀಡುವುದಾದರೆ ಕರ್ನಾಟಕದಿಂದ ಹಲವಾರು ಕಲಾವಿದರು ಅಂತರ್ರಾಷ್ಟ್ರೀಯ ಮಟ್ಟದ ಆರ್ಟ್ ರೆಸಿಡೆನ್ಸಿಗಳಲ್ಲಿ ಭಾಗವಹಿಸಿದ್ದರು, ಅಲ್ಲಿನ ಅನುಭವಗಳನ್ನು ಆಪ್ತವಲಯಗಳಲ್ಲಿ, ಗ್ಯಾಲರಿಗಳಲ್ಲಿ ಹಂಚಿಕೊಳ್ಳುತ್ತಾರೆಯೆ ವಿನಃ ಸಾಮಾಜಿಕ ತಾಣಗಳ ಮೂಲಕ ಎಲ್ಲರನ್ನು ತಲುಪಲು ಬಯಸುವುದಿಲ್ಲ. ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಳ್ಳುವಾಗ ಅದಕ್ಕೆ ಎದುರುಗಡೆಯ ವ್ಯಕ್ತಿಯಿಂದ ತತ್‌ಕ್ಷಣದ ಪ್ರತಿಕ್ರಿಯಾನುಭವವನ್ನು ನಿರೀಕ್ಷಿಸುವುದೂ ಒಂದು ಕಾರಣವಾಗಿರಬಹುದು. ಇದು ಅಂತರ್ಜಾಲದಲ್ಲಿ ಸಾಧ್ಯವಾಗುವುದಿಲ್ಲ. ಯೂಟೂಬ್ನಲ್ಲಿ ಹುಡುಕಿದರೆ ಹೊರದೇಶದ ಅಂತರ್ರಾಷ್ಟ್ರೀಯ ಕಲಾವಿದರ ವಿಡಿಯೋ ಕಲೆಗಳು ಸಿಗುತ್ತವೆಯೇ ವಿನಃ ಇಲ್ಲಿನ ಸ್ಥಳೀಯ ಕಲಾವಿದರ ಕೃತಿಗಳು ಸಿಗುವುದಿಲ್ಲ. ಅದರಲ್ಲೂ ಸಿಗುವ ವಿಡಿಯೋಗಳಲ್ಲಿ ಪೂರ್ಣ ಪ್ರಮಾಣದ ವಿಡಿಯೋ ಸಿಗುವುದು ಈಗಾಗಲೇ ಪ್ರಸಿದ್ದರಾದಂತಹ ಕಲಾವಿದರದ್ದು ಮಾತ್ರ, ಸಮಕಾಲೀನ ಕಲಾವಿದರದ್ದು ವಿಡಿಯೋಗಳ ಕೆಲವು ತುಣುಕುಗಳು ಮಾತ್ರ ಇರುತ್ತವೆ. ಪೂರ್ಣ ಪ್ರಮಾಣದಲ್ಲಿ ನೋಡಬೇಕಾದರು ಕೆಲವೊಂದು ಪಾಶ್ಚಿಮಾತ್ಯ ಕಲಾವಿದರ ವಿಡಿಯೋಗಳು ದೊರಕುತ್ತವೆಯಾದರು ಅದಕ್ಕೆ ಹೆಚ್ಚು ವೇಗದ ಅಂತರ್ಜಾಲದ ಸೌಲಭ್ಯ ಅನಿವಾರ್ಯತೆ ಇರುವುದರಿಂದ ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ, ಇಲ್ಲವಾದಲ್ಲಿ ವಿಡಿಯೋ ನೋಡುವ ಅನುಭವದ ಸಮಗ್ರತೆಗೆ, ಕಾದು ಕಾದು ನೋಡುವ ಪ್ರಕ್ರಿಯೆ ದಕ್ಕೆಯುಂಟು ಮಾಡುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಕಲಾವಿದರಿಗೆ ಇರುವ ಕಾಪಿರೈಟ್ಸ್ ಭಯ, ತಮ್ಮ ಕ್ರಿಯಾಶೀಲತೆಯ ಅವಿಷ್ಕಾರದ ನಕಲಾಗುವ ಭಯವು ಪೂರ್ಣ ಪ್ರಮಾಣದಲ್ಲಿ ಪ್ರದರ್ಶಿಸಲು ಒಪ್ಪುವುದಿಲ್ಲ. ಈ ತುಣುಕುಗಳನ್ನು ಕೆಲವು ಕಲಾವಿದರು ಸ್ವತಃ ಸೇರಿಸಿದ್ದರೆ, ಕೆಲವೊಂದನ್ನು ಗ್ಯಾಲರಿ, ಮ್ಯೂಸಿಯಂನವರು ಸೇರಿಸಿರುತ್ತಾರೆ. ಈ ಪದ್ದತಿಯೇ ಕರ್ನಾಟಕದಲ್ಲಿ ಸಾಮಾಜಿಕ ತಾಣಗಳಲ್ಲಿ ಜನಪ್ರಿಯವಾಗುವ ಮೂಲಕ ನಡೆಯುವ ಕ್ರಿಯಾಶೀಲತೆ ಕಳುವಿನ ಅಳುಕಿನಿಂದಾಗಿ ಬಹುತೇಕ ಕಲಾವಿದರು ತಮ್ಮ ಕಲಾಕೃತಿಗಳನ್ನು ಸಾಮಾಜಿಕ ತಾಣಗಳ ಮೂಲಕ ಪ್ರದರ್ಶಿಸಲು ಹೋಗುವುದಿಲ್ಲ. ಅದಕ್ಕೆ ತದ್ವಿರುದ್ದವಾಗಿ , ಗ್ಯಾಲರಿಗಳ ಮೂಲಕ ಕಲಾ ಮಾರುಕಟ್ಟೆ ಸೇರುವ ಕಲಾಕೃತಿಗಳು ಕಲಾ ಮಾರಾಟಗಾರರ ಮೂಲಕ ಅದೇ ಸಾಮಾಜಿಕ ತಾಣಗಳಿಗೆ ಪ್ರವೇಶಿದರೆ ಆಗ ಯಾವುದೇ ಆತಂಕವಿರುವುದಿಲ್ಲ ಕಲಾವಿದರಿಗೆ. ನಕಲಿಗೆ ಸಂಭಂದಿಸಿದ ಜಾಗ್ರತೆಯನ್ನು ಗ್ಯಾಲರಿಗಳ ಮೇಲೆ ಹೊರಿಸಿ ಇವರು ನಿರಾಳರಾಗಿರುತ್ತಾರೆ.

ಈ ಆತಂಕ ಭಯಗಳ ಮಧ್ಯದಲ್ಲು ಕೆಲವು ಕಲಾವಿದರು ತಮ್ಮ ಕಲಾಪ್ರಯೋಗಗಳಲ್ಲಿ ಅಂತರ್ಜಾಲವನ್ನು ಬಳಸಿಕೊಂಡಿದ್ದಾರೆ. ೨೦೧೧ರಲ್ಲಿ ನಡೆದ ಕಲಾವಿದೆ ಸುರೇಖಾರವರ ಜಕ್ಕೂರು ಕೆರೆ ಯೋಜನೆಯ ಅಂಗವಾಗಿ ತಮ್ಮ ವೆಬ್ ತಾಣದಲ್ಲಿ (೧*)ಈ ಯೋಜನೆಗೆ ಸಂಭಂದಿಸಿದ ಚಿತ್ರಗಳು ಲೇಖನಗಳನ್ನು ಪ್ರಕಟಿಸಿ, ಕಲಾ ಸಮುದಾಯವನ್ನು ಅದರಲ್ಲಿ ಭಾಗವಹಿಸುವಂತೆ ಮಾಡಿದ್ದರು. ಇದರಲ್ಲಿ ಸುಮಾರು ಕಲಾವಿದರು, ಲೇಖಕರು ಈ ಯೋಜನೆಗೆ ಸಂಭಂದಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಆ ಮೂಲಕ ಅವರೂ ಈ ಯೋಜನೆಯಲ್ಲಿ ಭಾಗವಹಿಸಿದಂತಾಯಿತು. ಇದಕ್ಕು ಮೊದಲು ಸಮೂಹ ಹೆಸರಲ್ಲಿ ಜಿ.ಸುರೇಶ್‌ಕುಮಾರ್, ಶಿವಪ್ರಸಾದ್, ಅರ್ಚನಾ ಪ್ರಸಾದ್ ರವರು ಮಾಡಿದ ಯೋಜನೆಯನ್ನು ಅವರದೇ ಆದ ವೆಬ್ ತಾಣ ಮತ್ತು ಫೇಸ್‌ಬುಕ್ಕಲ್ಲಿ ದಾಖಲಿಸಲಾಯಿತು. ಜಿ.ಸುರೇಶ್‌ಕುಮಾರ್ ರವರ ಪರ್‌ಫ್ಯೂಮ್ಸ್ ಹೆಸರಿನ ಯೋಜನೆಯು ಫೇಸ್‌ಬುಕ್ಕಲ್ಲಿ ಪ್ರತ್ಯೇಕವಾಗಿ ಕಲಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಇದೆ ಸುರೇಶ್‌ಕುಮಾರ್‌ರವರ ಮತ್ತೆರೆಡು ಬ್ಲಾಗ್‌ಗಳಿವೆ. (೨*) ಆ ಎರಡೂ ಬ್ಲಾಗ್‌ಗಳಲ್ಲಿ ಸುರೇಶ್ ಕುಮಾರ್‌ರವರು ತಾವು ದಾಖಲಿಸಿರುವ ಕಲಾ ಚಟುವಟಿಕೆಗಳ ವಿಡಿಯೋಗಳನ್ನು ನೋಡಬಹುದು. ಕಲಾ ಇತಿಹಾಸಕಾರರು, ವಿಮರ್ಶಕರು, ಉಪನ್ಯಾಸಕರಾದ ಎಚ್.ಎ.ಅನಿಲ್‌ಕುಮಾರ್‌ರವರು ತಮ್ಮದೇ ತಾಣದಲ್ಲಿ (೩*) ಕಲೆಗೆ ಸಂಭಂದಿಸಿದ ಲೇಖನಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ಶಾಂತಿನಗರದಲ್ಲಿರುವ ವಿಮರ್ಶಕರು, ಇತಿಹಾಸಕಾರರಾದ ಸುರೇಶ್‌ಜಯರಾಂ ರವರ ೧ಶಾಂತಿರೋಡ್ ಗ್ಯಾಲರಿ, ಆರ್ಟ್ ರೆಸಿಡೆನ್ಸಿಯದ್ದು ವೆಬ್‌ತಾಣವಿದ್ದು (೪*) ಅಲ್ಲಿ ನಡೆಯುವ ಚಟುವಟಿಕೆಗಳ ಕುರಿತಂತೆ ಮಾಹಿತಿಯನ್ನು ತಮ್ಮ ಬ್ಲಾಗ್ ತಾಣದಲ್ಲಿ ಪ್ರಕಟಿಸುತ್ತಿರುತ್ತಾರೆ. ಈ ವೆಬ್‌ತಾಣಗಳನ್ನು ಕುರಿತಂತೆ ಮತ್ತೊಮ್ದು ವಿಷಯವನ್ನು ಗಮನಿಸಬೇಕಾಗುತ್ತದೆ. ಇಲ್ಲಿ ವೆಬ್‌ತಾಣಗಳನ್ನು ಸ್ವಂತವಾಗಿ ಹಣ ಪಾವತಿಸಿ ಪಡೆದವರ ದಾಖಲೆಗಳು ಅವರಿಗೆ ಸೇವೆಯನ್ನು ಒದಗಿಸುವವರ ಮೂಲಕ ದಾಖಲೆಗಳ ಸುರಕ್ಷತೆಯ ಖಾತ್ರಿಯು ದೊರೆಯುತ್ತದೆ. ಇದೇ ಸೌಲಭ್ಯ ಅಂತರ್ಜಾಲದಲ್ಲಿ ಉಚಿತವಾಗಿ ಸ್ಥಳಾವಕಾಶವನ್ನು ಪಡೆದವರಿಂದ ದೊರೆಯುವುದಿಲ್ಲ. ಅಲ್ಲಿ ಖಾತೆ ತೆರೆಯುವಾಗ ಮೊದಲಿಗೆ ಷರತ್ತುಗಳು ಅನ್ವಯ ಎಂದು ಅದಕ್ಕೆ ಸಮ್ಮತಿಯನ್ನು ಪಡೆಯುತ್ತಾರೆ. ಅಂತರ್ಜಾಲದಲ್ಲಿ ಸೇರಿದ ತಕ್ಷಣ ಅದು ಶಾಶ್ವತ ಎಂದು ಭಾವಿಸಿ ತಮ್ಮಲ್ಲಿರುವ ದಾಖಲೆಗಳನ್ನು ಅಳಿಸುವಂತಿಲ್ಲ.

ಇದರ ಜೊತೆಗೆ ಬೆಂಗಳೂರಿನಲ್ಲಿರುವ ಕಲಾಗ್ಯಾಲರಿಗಳು ತಮ್ಮದೇ ಆದ ವೈಯುಕ್ತಿಕ ವೆಬ್ ತಾಣಗಳನ್ನು ಹೊಂದಿವೆ. ಇವೆಲ್ಲ ಆಯಾ ಗ್ಯಾಲರಿಗಳನ್ನು ಸಂಪರ್ಕಿಸಲು, ಪ್ರಚಾರ ಪಡಿಸಲು ಬಳಸಿಕೊಳ್ಳಲಾಗುತ್ತದೆ. ಕಲೆಯ ಕುರಿತಾದ ಗಂಭೀರ ಚರ್ಚೆಯನ್ನು ಹುಟ್ಟು ಹಾಕುವಂತಹ ಅಥವ ಕಲಾ ಚಟುವಟಿಕೆಗಳಲ್ಲಿ ಸಾಮೂಹಿಕ ಭಾಗವಹಿಸುವಿಕೆಯಂತಹ ವೆಬ್‌ತಾಣಗಳು ಕರ್ನಾಟಕದ ಮಟ್ಟಿಗೆ ಯಾವುದೂ ಇಲ್ಲ. ಸಮೂಹ ಯೋಜನೆಯ ಅವದಿಯಲ್ಲಿ ಫೇಸ್‌ಬುಕ್ಕಲ್ಲಿ ಕೆಲವೊಂದು ಗಂಭೀರ ಚರ್ಚೆಗಳು ನಡೆದದ್ದುಂಟು.

ಅಂತರ್ಜಾಲವನ್ನು ಕೇವಲ ದಾಖಲಿಸುವ ಅಥವ ವಿಚಾರ ವಿನಿಮಯ ಮಾಡಿಕೊಳ್ಳಲಷ್ಟೇ ಅಲ್ಲದೆ ಬೇರೆ ರೀತಿಯಲ್ಲೂ ಕಲಾವಿದರು ಬಳಸಿಕೊಂಡಿರುವ ಉದಾಹರಣೆಯೆಂದರೆ, ಭರತೇಶ್ ಯಾದವ್ ರವರು ತಮ್ಮ ಸ್ವಿಜರ್ಲೆಂಡಿನಲ್ಲಿನ ಆರ್ಟ್ ರೆಸಿಡೆನ್ಸಿ ಯೋಜನೆಯ ಪ್ರಯುಕ್ತ ಬರ್ನ್‌ನಲ್ಲಿದ್ದಾಗ ಅಲ್ಲಿನ ತಮ್ಮ ಯೋಜನೆಗಾಗಿ ಅಂತರ್ಜಾಲದಲ್ಲಿನ ವಿಡಿಯೋ ಚಾಟ್ ಮೂಲಕ ಬೆಂಗಳೂರು ಸೇರಿದಂತೆ ಹಲವು ದೇಶಗಳಿಂದ ಧ್ವನಿಯಾಕ್ಷರವನ್ನು ಸಂಗ್ರಹಿಸಿದ್ದರು. ಮತ್ತೊಬ್ಬ ಬೆಂಗಳೂರಿನ ಕಲಾವಿದೆ ಸುರೇಖಾರವರು ವಿದೇಶದಿಂದ ವಿಡಿಯೋ ಚಾಟ್ ಮುಖಾಂತರ ಬೆಂಗಳೂರಿನಲ್ಲಿರುವ ಸ್ಟುಡಿಯೋ ಒಂದರಲ್ಲಿ ತಮ್ಮ ವಿಡಿಯೋಗಳ ಸಂಕಲನ ಮಾಡಿಸಿ, ಯ್ಯೂಸೆಂಡಿಟ್, ಡ್ರಾಪ್ ಬಾಕ್ಸ್ ತಾಣಗಳ ಮೂಲಕ ಅಲ್ಲಿಗೆ ತರಿಸಿಕೊಂಡು ಪ್ರದರ್ಶಿಸಿದ್ದರು. ಅರ್ಚನಾ ಹಂಡೆಯವರು ಭಾರತೀಯ ಮದುವೆ, ಗಂಡು, ಹೆಣ್ಣನ್ನು ಪರಸ್ಪರ ಆಯ್ಕೆ ಮಾಡಿಕೊಳ್ಳುವುದನ್ನು ಕುರಿತಂತೆ ಅಣಕು ಕೃತಿಯನ್ನು ಅಂತರ್ಜಾಲದಲ್ಲಿ ಮಾಡಿದ್ದಾರೆ (೫*).

1. http://surekha.info/negotiating-routes-jakkurlake/
2. http://perfumesbengaluru.tumblr.com/
3. http://www.youtube.com/channel/UCXidBlteE25vJahMKFtGTMg?feature=watch
4. http://haanilkumar.com/
5. http://www.1shanthiroad.blogspot.in/
6. http://www.arrangeurownmarriage.com/
7. http://belakindi.com

ಲೇಖಕ: ಮಂಸೋರೆ

ವೃತ್ತಿ ಚಿತ್ರಕಲಾವಿದ. ಕರ್ನಾಟಕ ಚಿತ್ರಕಲಾ ಪರಿಷತ್ತಿನಿಂದ ಸ್ನಾತಕೋತ್ತರ ಪದವೀದರ. ಸದ್ಯ ಚಿತ್ರರಂಗದಲ್ಲಿ ಸ್ವತಂತ್ರ ಕಲಾ ನಿರ್ದೇಶಕ